You are hereForums / ಸಾಮಾಜಿಕ ವಿಚಾರಗಳು / ಪಬ್ ಸಂಸ್ಕೃತಿ- ಮಬ್ಬಾದ ಸ್ಮೃತಿ

ಪಬ್ ಸಂಸ್ಕೃತಿ- ಮಬ್ಬಾದ ಸ್ಮೃತಿ


By DIVAKAR N - Posted on 03 February 2009

ಪಬ್ ಸಂಸ್ಕೃತಿ- ಮಬ್ಬಾದ ಸ್ಮೃತಿ

ಮಂಗಳೂರಿನಲ್ಲಿ ಪಬ್ ಒಂದರ ಮೇಲೆ ನಡೆದ ದಾಳಿ ಮಾಧ್ಯಮಗಳ ದಯೆಯಿಂದ ರಾಷ್ಟ್ರವ್ಯಾಪಿ ಸುದ್ದಿಯಾಗಿದ್ದು ದೃಶ್ಯ ಮಾಧ್ಯಮಗಳಲ್ಲಿ ಗಂಭೀರವಾದ ಚರ್ಚೆಗೊಳಗಾಗಿದೆ. ಈ ಪ್ರಕರಣದಲ್ಲಿ ಅಪರಾಧಿಗಳ ಹಿಂಡನ್ನೇ ಗುರುತಿಸಬಹುದು. ಪಬ್‌ಗಳನ್ನು ನಡೆಸುವ ನೆಪದಲ್ಲಿ ಯುವಜನಾಂಗವನ್ನು ತಪ್ಪುದಾರಿಗೆ ಎಳೆಯುವ ಮದ್ಯದ ದೊರೆಗಳು, ತಮ್ಮ ವಿಲಾಸೀ ಭೋಗ ಜೀವನದಲ್ಲಿ ಮೈಮರೆತು ಸುತ್ತಲಿನ ಸಾಮಾಜಿಕ ಸ್ಥಿತ್ಯಂತರಗಳನ್ನು ಲೆಕ್ಕಿಸದ ಮೇಲ್ ಮಧ್ಯಮವರ್ಗದ ಜನತೆ, ತಮ್ಮ ಸಾಮಾಜಿಕ ಹೊಣೆಗಾರಿಕೆಯನ್ನು ಗ್ರಹಿಸದೆಯೇ ಅಂಧರಂತೆ ಮುನ್ನಡೆಯುವ ಯುವಜನತೆ, ಸಾರಾಯಿ ನಿಷೇದ ಮಾಡಿದರೂ ಸರ್ಕಾರದ ಆದಾಯದ ದೃಷ್ಟಿಯಿಂದ ಸಂಪೂರ್ಣ ಪಾನನಿಷೇಧ ಜಾರಿಗೆ ತರದ ಆಳುವ ವರ್ಗಗಳು, ಇವರೆಲ್ಲರೂ ಮೂಲಭೂತವಾಗಿ ತಪ್ಪಿತಸ್ಥರಾಗುತ್ತಾರೆ.

ನಂತರದ ಹಂತದಲ್ಲಿ ಈ ಯುವಜನತೆಗೆ ಪ್ರೋತ್ಸಾಹ ನೀಡುವ ಪೋಷಕರು, ವಿದ್ಯಾರ್ಥಿ ಯುವಜನತೆಗೆ ನೈತಿಕತೆಯನ್ನು ಬೋಧಿಸುವುದರಲ್ಲಿ ವಿಫಲವಾಗಿರುವ ನಮ್ಮ ಶೈಕ್ಷಣಿಕ ವ್ಯವಸ್ಥೆ, ಯುವಜನರಿಗೆ ಒಂದು ಆದರ್ಶ ಪ್ರಾಯ ಅಡಿಗಲ್ಲು ನಿರ್ಮಿಸದ ನಾಗರಿಕ ಸಮಾಜ, ವಾಸ್ತವವನ್ನೇ ವೈಭವೀಕರಿಸಿ ಅವರಲ್ಲಿ ಹಿಂಸೆ, ಅಶ್ಲೀಲತೆ ಮತ್ತು ದ್ವೇಷದ ಗುಣಗಳನ್ನು ತುಂಬುವ ಚಲನಚಿತ್ರ, ಟಿವಿ ಯಂತಹ ಕೆಲವು ಸಮೂಹ ಮಾಧ್ಯಮಗಳು, ಈ ಎಲ್ಲ ಪ್ರಕ್ರಿಯೆಗಳಿಗೂ ಪೂರಕವಾದ ವಾತಾವರಣ ಮತ್ತು ಅನುಕೂಲಕರ ಸನ್ನಿವೇಶವನ್ನು ಸೃಷ್ಟಿಸುವ ರಾಜಕೀಯ ನಾಯಕತ್ವ ಅಪರಾಧಿ ಸ್ಥಾನದಲ್ಲಿ ನಿಲ್ಲುತ್ತವೆ.

ಈ ಗೋಜಲುಗಳ ನಡುವೆ ಜನ ಸಮುದಾಯಗಳ ಜೀವನ ಶೈಲಿಯನ್ನೇ ನಗಣ್ಯವಾಗಿಸಿ ತಮ್ಮದೇ ಆದ ವ್ಯಾಖ್ಯಾನಕ್ಕೆ ಒಳಗಾದ ಸಾಂಸ್ಕೃತಿಕ ಸಂಕಥನಗಳಿಗೆ ಸಾಮಾಜಿಕ ಲಕ್ಷಣಗಳನ್ನು ಆರೋಪಿಸಿ ಅವುಗಳಿಗೆ ಧಾರ್ಮಿಕ ಲೇಪನ ನೀಡಿ, ಈ ಸ್ವಘೋಷಿತ ಸಂಸ್ಕೃತಿಯನ್ನೇ ಜನಸಂಸ್ಕೃತಿ ಎಂದು ಬಿಂಬಿಸಿ ಅದನ್ನು ರಕ್ಷಿಸಲು ಟೊಂಕ ಕಟ್ಟಿ ನಿಂತಿರುವವರು, ಶ್ರೀರಾಮ ಸೇನೆ, ಭಜರಂಗದಳ, ತಾಲಿಬಾನ್ ಮುಂತಾದ ಸಂಘಟನೆಗಳು, ಮೇಲೆ ಹೇಳಿದ ನ್ಯೂನತೆಗಳಿಗೇ ಸಾಂಸ್ಕೃತಿಕ ಸ್ವರೂಪ ನೀಡಿ, ರಾಷ್ಟ್ರದ ರಕ್ಷಣೆಗೆ ಸಂಸ್ಕೃತಿಯ ರಕ್ಷಣೆ ಮುಖ್ಯ ಎಂದು ಹುಯಿಲೆಬ್ಬಿಸುತ್ತಾರೆ.

ಸಂಸ್ಕೃತಿಯ ಸಂಕಥನಗಳು

ಇಲ್ಲಿ ಸಂಸ್ಕೃತಿಯ ವ್ಯಾಖ್ಯೆಯನ್ನೇ ಪ್ರಶ್ನಿಸಬೇಕಾಗುತ್ತದೆ. ಹಿಂದೂ ಸಂಸ್ಕೃತಿ, ಮುಸ್ಲಿಂ ಸಂಸ್ಕೃತಿ, ಕನ್ನಡಿಗರ ಸಂಸ್ಕೃತಿ ಹೀಗೆ ಜನ ಸಮುದಾಯಗಳ ದೈನಂದಿನ ಜೀವನವನ್ನು ಮಾತ್ರ ಆಧರಿಸಿ, ಅವರ ಸಾಂಪ್ರದಾಯಿಕ ಆಚರಣೆಗಳಿಗೇ ಸಾಂಸ್ಕೃತಿಕ ಸ್ವರೂಪ ನೀಡುವ ಮೂಲಕ ಸಂಸ್ಕೃತಿಯ ವ್ಯಾಪಕತೆಯನ್ನೇ ಸೀಮಿತಗೊಳಿಸಲಾಗುತ್ತಿದೆ. ಧರ್ಮ, ಧಾರ್ಮಿಕ ವಿಧಿವಿಧಾನಗಳು, ದೈವಾರಾಧನೆಯ ಆಚರಣೆಗಳು, ಜನಜೀವನದ ವಿವಿದ ಮಜಲುಗಳು, ಇವೆಲ್ಲವನ್ನೂ ಮೀರಿ ಸಂಸ್ಕೃತಿ ಎಂಬ ಮೂರ್ತ ರೂಪ ಅಸ್ತಿತ್ವದಲ್ಲಿದೆ ಎಂಬ ವಾಸ್ತವ, ಭಾವುಕತೆಯ ಅಲೆಗಳಲ್ಲಿ ಕಳೆದುಹೋಗುತ್ತದೆ. ಹಾಗಾಗಿಯೇ ಸಾಂಸ್ಕೃತಿಕ ರಾಷ್ಟ್ರೀಯತೆಯ ಪರಿಕಲ್ಪನೆಯೂ ಮೂಡುತ್ತದೆ.

ಸಾವಿರಾರು ಜನಸಂಸ್ಕೃತಿಗಳ ಸಮ್ಮಿಲನವಾದ ಒಂದು ಭೌಗೋಳಿಕ ಪ್ರದೇಶಕ್ಕೆ ಏಕರೂಪದ ಸಂಸ್ಕೃತಿಯನ್ನು ಹೇರುವ ಈ ಸಾಂಸ್ಕೃತಿಕ ರಾಷ್ಟ್ರೀಯತೆಯ ಕಲ್ಪನೆ ಜನರನ್ನು ಒಂದುಗೂಡಿಸುವುದಕ್ಕಿಂತಲೂ ಹೆಚ್ಚಾಗಿ ವಿಘಟಿಸುತ್ತಾ ಹೋಗುತ್ತದೆ. ಈ ಹಿನ್ನೆಲೆಯಲ್ಲೇ ಪೌರ್ವಾತ್ಯ ಮತ್ತು ಪಾಶ್ಚಿಮಾತ್ಯ ಸಂಸ್ಕೃತಿಗಳಿಗೂ ಸಾಕಷ್ಟು ಪ್ರಾಮುಖ್ಯತೆ ನೀಡಲಾಗಿದೆ. ಪೌರ್ವಾತ್ಯ ಸಂಸ್ಕೃತಿ ಎಂದಾಕ್ಷಣ ಇಡೀ ಪೂರ್ವ ರಾಷ್ಟ್ರಗಳ ಜನ ಸಂಸ್ಕೃತಿ ಒಂದೇ ಎಂದು ಅರ್ಥೈಸಲಾಗುತ್ತದೆ. ಹಾಗೆಯೇ ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಭಿನ್ನವಾಗಿ, ವಿರೋಧಿ ಸಂಸ್ಕೃತಿಯಾಗಿಯೇ ಕಾಣಲಾಗುತ್ತದೆ. ಸಂಸ್ಕೃತಿಯ ವ್ಯಾಖ್ಯಾನಕ್ಕೆ ಅಂತಿಮ ರೂಪ ನೀಡುವವರು ಯಾರು ಎಂಬ ಅಂಶ ಇಲ್ಲಿ ಪ್ರಮುಖವಾಗುತ್ತದೆ.

ಯಾವುದೇ ದೇಶದ ಇತಿಹಾಸದಲ್ಲಿ ಆರ್ಥಿಕವಾಗಿ, ಸಾಮಾಜಿಕವಾಗಿ ಪ್ರಬಲವಾಗಿರುವ ಜನಸಮುದಾಯಗಳು ಸಂಸ್ಕೃತಿಯ ವ್ಯಾಖ್ಯಾನಕಾರರಾಗಿರುತ್ತಾರೆ. ಇತಿಹಾಸದ ಕಾಲಘಟ್ಟಗಳಲ್ಲಿ ಪ್ರತಿಯೊಂದು ಭೌಗೋಳಿಕ ಪ್ರದೇಶದಲ್ಲೂ ಸಾಂಸ್ಕೃತಿಕ ಸಂಕಥನಗಳು ಅಂದಿನ ಸಾಮಾಜಿಕ ಸ್ಥಿತ್ಯಂತರಗಳಿಗೆ ಪೂರಕವಾಗಿ ವ್ಯಕ್ತವಾಗಿವೆ. ಹಾಗಾಗಿಯೇ ಆದಿವಾಸಿ ಸಮುದಾಯಗಳಲ್ಲಿ, ಊಳಿಗಮಾನ್ಯ ವ್ಯವಸ್ಥೆಯಲ್ಲಿ, ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಮತ್ತು ಸಮಾಜವಾದಿ ವ್ಯವಸ್ಥೆಯಲ್ಲಿ ವಿಭಿನ್ನ ಸಾಂಸ್ಕೃತಿಕ ಸಂಕಥನಗಳನ್ನು ಕಾಣುತ್ತೇವೆ.

ಆದರೆ ಧಾರ್ಮಿಕ ಸಂಘಟನೆಗಳು ಸಂಸ್ಕೃತಿಯನ್ನು ವಿಭಿನ್ನ ರೀತಿಯಲ್ಲೇ ಆಲೋಚಿಸುತ್ತವೆ. ಕ್ರೈಸ್ತ ಧರ್ಮವಾಗಲೀ, ಹಿಂದೂ ಧರ್ಮವಾಗಲೀ, ಇಸ್ಲಾಂ ಆಗಲೀ ಸಂಸ್ಕೃತಿಯ ಸಂಕಥನಗಳನ್ನಾಧರಿಸಿಯೇ ತಮ್ಮ ಅಸ್ತಿತ್ವಗಳನ್ನು ಉಳಿಸಿಕೊಳ್ಳಲು ಯತ್ನಿಸುತ್ತವೆ. ಧರ್ಮ-ದೇವರು-ಧಾರ್ಮಿಕ ಶ್ರದ್ಧೆ-ಆಚಾರವಿಚಾರಗಳು-ಸಂಪ್ರದಾಯ ಮತ್ತು ಜನಸಮುದಾಯಗಳಲ್ಲಿ ಶತಮಾನಗಳಿಂದ ಬೇರೂರಿರುವ ನಂಬಿಕೆಗಳು, ಕಾಲಾನುಕ್ರಮದಲ್ಲಿ ಸಂಸ್ಕೃತಿಯ ರೂಪ ಪಡೆಯುತ್ತವೆ. ಪುರಾಣಗಳು, ಮಿಥ್ಯೆಗಳು, ದೈವೀಕ ಶಕ್ತಿಯನ್ನಾಧರಿಸಿದ ಕಥನಗಳೆಲ್ಲವನ್ನೂ ಈ ದೃಷ್ಟಿಯಿಂದಲೇ ನೋಡಬಹುದು. ತಾತ್ವಿಕವಾಗಿ ಧರ್ಮ ಮತ್ತು ಜನಸಾಮಾನ್ಯರ ದೈನಂದಿನ ಜನಜೀವನ ವಿಭಿನ್ನವಾದರೂ ಧರ್ಮಗಳ ಪ್ರತಿಷ್ಟಾಪನೆಗೆ ಸಂಸ್ಕೃತಿ ಒಂದು ಅಡಿಗಲ್ಲಾಗುತ್ತದೆ. ಹಾಗಾಗಿಯೇ ಧಾರ್ಮಿಕ ಆಚರಣೆಗಳು ಸಾಂಸ್ಕೃತಿಕ ರೂಪದಲ್ಲಿ ಪ್ರಕಟಗೊಳ್ಳುತ್ತವೆ. ಜನಸಂಸ್ಕೃತಿಯ ನಡುವೆ, ಸಮಾಜದ ಉತ್ಪಾದಕೀಯ ಶಕ್ತಿಗಳನ್ನು ಪ್ರತಿನಿಧಿಸುವ ದುಡಿಯುವ ವರ್ಗಗಳ ನಡುವೆ ಉದ್ಭವಿಸುವ ಅನೇಕ ಸಾಮಾಜಿಕ-ಸಾಂಸ್ಕೃತಿಕ ಆಚರಣೆಗಳು ಒಂದು ಕಾಲಘಟ್ಟದಲ್ಲಿ ಧರ್ಮದ ಸೆಲೆಗೆ ಸಿಲುಕಿ ಹಬ್ಬ-ಹರಿದಿನಗಳ ಸ್ವರೂಪ ಪಡೆದಿರುವುದನ್ನೂ ನೋಡಬಹುದು. ಉದಾಹರಣೆಗೆ ಸಂಕ್ರಾಂತಿ, ಓಣಂ, ದೀಪಾವಳಿ, ಮೊಹರಂ, ಈಸ್ಟರ್ ಇತ್ಯಾದಿ ಇತ್ಯಾದಿ.,

ಈ ಸಂದರ್ಭದಲ್ಲೇ ಧಾರ್ಮಿಕ ಪುನರುತ್ಥಾನದ ಕೂಗು ಸ್ಪಷ್ಟ ರೂಪ ಪಡೆಯುತ್ತದೆ. ಊಳಿಗಮಾನ್ಯ ವ್ಯವಸ್ಥೆಯಿಂದ ಬಂಡವಾಳಶಾಹಿ ವ್ಯವಸ್ಥೆಗೆ ಮುನ್ನಡೆಯುವ ಸಮಾಜದಲ್ಲಿ ಉತ್ಪಾದನಾ ಶಕ್ತಿಗಳನ್ನು ತಮ್ಮ ಹಿಡಿತದಲ್ಲಿರಿಸಿಕೊಳ್ಳಲು ಆಳ್ವಿಕರಿಗೆ ಮತ್ತು ಆಳ್ವಿಕರ ತಾತ್ವಿಕ ಬೆನ್ನೆಲುಬಾದ ಬಂಡವಾಳಿಗರಿಗೆ ಧರ್ಮ ಒಂದು ಅಸ್ತ್ರವಾಗುತ್ತದೆ. ಭಾರತದಲ್ಲಿ ಆಳಿದ ಮೊಘಲರು, ಇಡೀ ವಿಶ್ವವನ್ನೇ ಆಳಿದ ಬ್ರಿಟೀಷರು, ಭಾರತದ ದೇಶೀ ರಾಜಮಹಾರಾಜರುಗಳು ತಮ್ಮ ಆಢಳಿತಾವಧಿಯಲ್ಲಿ ಇದನ್ನು ಸ್ಪಷ್ಟವಾಗಿ ನಿರೂಪಿಸಿದ್ದಾರೆ. ಆದ್ದರಿಂದಲೇ ಅಭಿವೃದ್ಧಿ ಹೊಂದುತ್ತಿದ್ದ ಭಾರತದ ವಾಣಿಜ್ಯ ಕ್ಷೇತ್ರವನ್ನು ಕ್ರೋಢೀಕರಿಸುವ ನಿಟ್ಟಿನಲ್ಲಿ ಮತ್ತು ಅರಬ್ ಮತ್ತಿತರ ಜಾಗತಿಕ ಮಾರುಕಟ್ಟೆಯ ವಿರುದ್ಧ ಸ್ಪರ್ಧಿಸಲು ವಿಜಯನಗರ ಸಾಮ್ರಾಜ್ಯಕ್ಕೆ ಹಿಂದೂ ಧರ್ಮದ ಪುನರುತ್ಥಾನ ಒಂದು ಅಸ್ತ್ರವಾಗುತ್ತದೆ. ತಮ್ಮ ವಸಾಹತುಶಾಹಿ ಧೋರಣೆಗೆ ಮಾನ್ಯತೆ ದೊರೆಯುವಂತೆ ಮಾಡಲು ಬ್ರಿಟೀಷರಿಗೆ ಕ್ರೈಸ್ತ ಮಿಷನರಿಗಳ ಸ್ಥಾಪನೆ ಪೂರಕವಾಗುತ್ತದೆ. ಈ ಸಂದರ್ಭಗಳಲ್ಲಿ ನಾಶಹೊಂದಿರುವ ಜನಸಮುದಾಯಗಳು ಇತಿಹಾಸದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದರೂ, ಈ ಸಾಮ್ರಾಟರಿಂದ ನಾಶವಾದ ದೇವಾಲಯ, ಮಸೀದಿ, ಚರ್ಚುಗಳು ಮಾತ್ರ ಇಂದಿಗೂ ಸಮಾಜವನ್ನು ಭೂತಗಳಂತೆ ಕಾಡುತ್ತಿರುವುದು, ಧರ್ಮದ ಅಧಿಪತ್ಯಕ್ಕೆ ನಿದರ್ಶನವಷ್ಟೆ.

ಆಳುವ ವರ್ಗಗಳ ನಡುವಿನ ಪೈಪೋಟಿ ನಡೆಯುವುದು ಅಧಿಕಾರಗ್ರಹಣಕ್ಕಾಗಿ ಮತ್ತು ಸಂಪತ್ತಿನ ಕ್ರೋಢೀಕರಣಕ್ಕಾಗಿ. ರಾಷ್ಟ್ರಗಳ ಒಳಗಾಗಲೀ, ರಾಷ್ಟ್ರಗಳ ನಡುವೆಯಾಗಲೀ ಇದು ಚಾರಿತ್ರಿಕ ಸತ್ಯ. ಅಲೆಕ್ಸಾಂಡರಿನಿಂದ ಹಿಡಿದು ಇತ್ತೀಚಿನ ಅಮೆರಿಕದ ಇರಾಕ್ ಸಮರದವರೆಗೂ ಈ ಪರಂಪರೆಯನ್ನು ಗುರುತಿಸಬಹುದು. ಸಂಪತ್ತಿನ ಕ್ರೋಢೀಕರಣದೊಂದಿಗೇ ರಾಷ್ಟ್ರಗಳ ಸಂಪತ್ತನ್ನು ಸೃಷ್ಟಿಸುವ ದುಡಿಯುವ ವರ್ಗಗಳು ಹಾಗೂ ನೈಸರ್ಗಿಕ ಸಂಪತ್ತಿನ ಮೇಲೆ ಪ್ರಾಬಲ್ಯ ಸಾಧಿಸುವುದು ಯಾವುದೇ ಸಾಮ್ರಾಜ್ಯದ ಮೂಲಭೂತ ಲಕ್ಷಣವಾಗಿರುತ್ತದೆ. ಎರಡು ಜಾಗತಿಕ ಮಹಾ ಯುದ್ಧಗಳೂ ಇದರ ಪ್ರತೀಕವೇ ಆಗಿವೆ. ಹಾಗಾಗಿಯೇ ಇತಿಹಾಸದುದ್ದಕ್ಕೂ ಮತಾಂತರ, ಲೂಟಿ, ಕೊಲೆ, ಸುಲಿಗೆ, ಧಾರ್ಮಿಕ ಕಟ್ಟಳೆಗಳು ಹೇರಳವಾಗಿ ಕಂಡುಬರುತ್ತವೆ. ಆಕ್ರಮಿತ ಜನಸಮುದಾಯಗಳನ್ನು ತಮ್ಮ ಹಿಡಿತದಲ್ಲಿರಿಸಿಕೊಳ್ಳಲು ಈ ಪ್ರಕ್ರಿಯೆಗಳು ಉಪಯುಕ್ತವಾಗುವಷ್ಟೇ, ದೇಶೀ ಪ್ರಭುತ್ವಗಳಿಗೂ ಉಪಯುಕ್ತವಾಗುತ್ತವೆ. ಈ ನಿಟ್ಟಿನಲ್ಲಿ ಧರ್ಮ ಆಳ್ವಿಕರಿಗೆ ಪ್ರಬಲ ಅಸ್ತ್ರವಾಗಿ ಪರಿಣಮಿಸುತ್ತವೆ. ಧಾರ್ಮಿಕ ಕಟ್ಟಳೆಗಳನ್ನು ವಿಧಿಸುವ ಮೂಲಕ ಜನಸಾಮಾನ್ಯರನ್ನು ಅಧೀನರನ್ನಾಗಿ ಮಾಡುವ ಪ್ರಕ್ರಿಯೆಗೆ ಸಂಸ್ಕೃತಿ ಮತ್ತೊಂದು ಅಸ್ತ್ರವಾಗುತ್ತದೆ. ಈ ಪ್ರಕ್ರಿಯೆಯನ್ನೇ ಕ್ರೈಸ್ತ, ಇಸ್ಲಾಂ ಮತ್ತು ಹಿಂದೂ ಧರ್ಮಗಳ ಪ್ರತಿಪಾದಕರಲ್ಲಿ ಗುರುತಿಸಬಹುದಾಗಿದೆ.

ಆಧುನಿಕತೆ ಮತ್ತು ಸಂಸ್ಕೃತಿ

ಧರ್ಮದ ನೆಲೆಗಟ್ಟಿನಲ್ಲೇ ಸಂಸ್ಕೃತಿಯನ್ನು ವ್ಯಾಖ್ಯಾನಿಸುವ ಪರಂಪರೆಯಿಂದ ಹೊರಬಂದು ನೋಡಿದಾಗ ಭಾರತೀಯ ಅಥವಾ ಹಿಂದೂ ಸಂಸ್ಕೃತಿಯ ವೈಶಾಲ್ಯವನ್ನು ಗಮನಿಸಬಹುದು. ಬಲಪಂಥೀಯ ವಿಚಾರಧಾರೆಯಲ್ಲಿ ಬಹುತೇಕವಾಗಿ ಭಾರತೀಯ ಸಂಸ್ಕೃತಿಯನ್ನು ಹಿಂದೂ ಸಂಸ್ಕೃತಿಯೊಂದಿಗೆ ಸಮೀಕರಿಸಿ ವಿಶ್ಲೇಷಿಸಲಾಗುತ್ತದೆ. ಆದರೆ ಕಳೆದ ಐದು ಸಾವಿರ ವರ್ಷಗಳ ಇತಿಹಾಸವನ್ನು ವಸ್ತುನಿಷ್ಠವಾಗಿ ಅವಲೋಕನ ಮಾಡಿದಾಗ ಭಾರತದ ಬಹುಮುಖೀ ಸಂಸ್ಕೃತಿ ಭಿನ್ನವಾಗಿಯೇ ಕಾಣುತ್ತದೆ. ಬ್ರಿಟೀಷರ ಆಗಮನದ ನಂತರ ಭಾರತೀಯ ಮಧ್ಯಮವರ್ಗದಲ್ಲಿ ಉಂಟಾದ ಅನೇಕ ಸಾಮಾಜಿಕ ಪರಿವರ್ತನೆಗಳು ಸಂಸ್ಕೃತಿಯ ವ್ಯಾಖ್ಯಾನಕ್ಕೆ ಒಳಪಟ್ಟು , ಈಗ ಹಿಂದೂ ಎಂದು ಕರೆಯಲಾಗುವ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿರುವುದು ಸ್ಪಷ್ಟ. ಬಲಪಂಥೀಯರು ಮಹಿಳೆಯರ ಮೇಲೆ ವಿಧಿಸುವ ವಸ್ತ್ರ ಸಂಹಿತೆಗಳು, ನಡುವಳಿಕೆಯ ಕಟ್ಟಳೆಗಳು, ಅಶ್ಲೀಲತೆ-ಶೀಲಗಳ ಬಗೆಗಿನ ವಿಶ್ಲೇಷಣೆಗಳು, ಪುರುಷ ಮಹಿಳೆಯರ ನಡುವಿನ ಸಂಬಂಧಗಳು ಇವೆಲ್ಲವೂ ವಸಾಹತುಶಾಹಿಯ ಕಾಲಘಟ್ಟದಲ್ಲಿ ಉಂಟಾದ ವ್ಯತ್ಯಯಗಳಷ್ಟೆ.

ಪಾಶ್ಚಿಮಾತ್ಯ ರಾಷ್ಟ್ರಗಳ ಸಹಯೋಗದಿಂದ ಭಾರತೀಯ ಮಧ್ಯಮವರ್ಗಗಳಲ್ಲಿ ಅನೇಕ ಸಾಂಸ್ಕೃತಿಕ ಬದಲಾವಣೆಗಳಾಗಿರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಬಂಡವಾಳಶಾಹಿ ವ್ಯವಸ್ಥೆ ದೇಶದ ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರದಲ್ಲಿ ತನ್ನ ಛಾಪು ಮೂಡಿಸುತ್ತಿರುವಂತೆಯೇ, ಬಂಡವಾಳ ಪ್ರೇರಿತ ಸಂಸ್ಕೃತಿಗಳು ಮಧ್ಯಮವರ್ಗಗಳಲ್ಲಿ ಬೇರೂರುವುದು ಎಲ್ಲ ದೇಶಗಳಲ್ಲೂ ಕಂಡುಬರುವ ಸಾಮಾನ್ಯ ಸಂಗತಿ. ಭಾರತದಲ್ಲೂ ಇದೇ ಪ್ರಕ್ರಿಯೆ ನಡೆದಿರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಪ್ರಸ್ತುತ ವಿವಾದಕ್ಕೆ ಎಡೆ ಮಾಡಿಕೊಟ್ಟಿರುವ ಪಬ್ ಸಂಸ್ಕೃತಿಯನ್ನು ಪಾಶ್ಚಿಮಾತ್ಯ ಎನ್ನುವುದಕ್ಕಿಂತಲೂ ಬಂಡವಾಳಶಾಹಿ ಅಥವಾ ಊಳಿಗಮಾನ್ಯ ಸಂಸ್ಕೃತಿ ಎಂದರೆ ಹೆಚ್ಚು ಅರ್ಥಪೂರ್ಣವೆನಿಸುತ್ತದೆ. ಏಕೆಂದರೆ ಭಾರತೀಯ ಸಾಮಾಜಿಕ ವ್ಯವಸ್ಥೆ ತನ್ನ ಊಳಿಗಮಾನ್ಯ ಅವಸ್ಥೆಯಲ್ಲಿ ಇದೇ ಸಂಸ್ಕೃತಿಯನ್ನು ಪೋಷಿಸಿ ಬೆಳೆಸಿದೆ. ಯಾವುದೇ ರಾಷ್ಟ್ರದ ಅಥವಾ ಭೌಗೋಳಿಕ ಪ್ರದೇಶದ ಜನಜೀವನ ವಾಣಿಜ್ಯೀಕರಣಗೊಳ್ಳುವ ಸಮಯದಲ್ಲಿ ಬಂಡವಾಳ ಮತ್ತು ಮಾರುಕಟ್ಟೆಯ ನೇರ ಪ್ರವೇಶವಾಗುತ್ತದೆ. ಈ ಸಂದರ್ಭದಲ್ಲಿ ಶ್ರೀಮಂತ ವರ್ಗಗಳಿಗೆ ಮನರಂಜನೆ ತಮ್ಮ ಜೀವನದ ಅಂಶಿಕ ಭಾಗವಾಗಿ ಪರಿಣಮಿಸುತ್ತದೆ. ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಬಂಡವಾಳಶಾಹಿ ವ್ಯವಸ್ಥೆ ನೆಲೆಯೂರಿದಾಗ ಧನಿಕ ಸಮುದಾಯ ತಮ್ಮ ಮನರಂಜನೆಯ ಸಾಧನಗಳನ್ನೆಲ್ಲಾ ವಸ್ತುವಿನ ರೂಪದಲ್ಲೇ ನೋಡುತ್ತದೆ. ಹಾಗಾಗಿ ಮಹಿಳೆಯೂ ಒಂದು ಭೋಗದ ವಸ್ತುವಾಗುತ್ತಾಳೆ. ಈ ಅಪವಾದ ಪಾಶ್ಚಿಮಾತ್ಯ ಸಂಸ್ಕೃತಿಯಷ್ಟೇ ಪೌರ್ವಾತ್ಯ ಸಂಸ್ಕ್ರತಿಗೂ ಸಲ್ಲುತ್ತದೆ.

ಈ ದೃಷ್ಟಿಯಿಂದ ನೋಡಿದಾಗ ಭಾರತೀಯ ಇತಿಹಾಸದಲ್ಲಿ ಮದ್ಯ ಸೇವನೆಯೊಡನೆ ಮತ್ತು ನೃತ್ಯವನ್ನು ಆಸ್ವಾದಿಸುವ ಪರಂಪರೆ ಪಾಶ್ಚಿಮಾತ್ಯರಿಂದ ಎರವಲು ಪಡೆದಿದ್ದೇನಲ್ಲ. ಇಲ್ಲಿ ನೃತ್ಯ ಎಂದೊಡನೆ ಮಹಿಳೆಯೇ ಮನರಂಜನೆಯ ಸಾಧನವಾಗುವುದೂ ಸಹ ಯಾವುದೇ ಸಂಸ್ಕೃತಿಗೆ ಸೀಮಿತವಾಗಿಲ್ಲ. ಹಾಗಾಗಿಯೇ ಅನೇಕ ಪುರಾಣ ಕಥನಗಳಲ್ಲೂ ಮದಿರೆ-ಮದನೆಯರ ಸಂಗ ವೈಭವೀಕರಣಕ್ಕೊಳಗಾಗುತ್ತದೆ. ಇಂದ್ರನ ಆಸ್ಥಾನದ ನೃತ್ಯಗಳು, ವಿಶ್ವಾಮಿತ್ರ ಮೇನಕೆಯ ಪ್ರಸಂಗ ಇವೆಲ್ಲವೂ ನಿದರ್ಶನಗಳಷ್ಟೆ. ಶ್ರೇಣೀಕೃತ ಜಾತಿ ವ್ಯವಸ್ಥೆಯ ಭಾರತೀಯ ಸಮಾಜದಲ್ಲಿ ಊಳಿಗಮಾನ್ಯ ವ್ಯವಸ್ಥೆ ಉಚ್ಛಾಯ ಹಂತದಲ್ಲಿದ್ದಾಗ ಶ್ರೀಮಂತವರ್ಗಗಳಿಗೆ ನೃತ್ಯಗಳನ್ನು ಸವಿಯುವುದು ತಮ್ಮ ವಿಲಾಸಿ ಜೀವನದ ಸಂಕೇತವಾಗಿತ್ತು. ದೇವದಾಸಿ ಪದ್ಧತಿ ಇಂದಿಗೂ ಜೀವಂತವಾಗಿರುವುದು ಇದಕ್ಕೆ ಸಾಕ್ಷಿ. ಭಾರತಕ್ಕೆ ಬಂದ ಮೊಘಲರೂ ಇದೇ ಪರಂಪರೆಗೆ ಕಟ್ಟುಬಿದ್ದು ಮುಜರಾಗಳನ್ನು ಆಸ್ವಾದಿಸುತ್ತಿದ್ದುದನ್ನು ಗಮನಿಸಬಹುದು. ನವಾಬರ ಆಳ್ವಿಕೆಯಲ್ಲಿ ಇದು ಪರಾಕಾಷ್ಠೆ ತಲುಪಿತ್ತು.

ಧನಿಕ-ಮಧ್ಯಮವರ್ಗಗಳ ಮನರಂಜನೆಗೆ ಹೆಣ್ಣು ಒಂದು ಭೋಗವಸ್ತುವಾಗಿ ಪರಿಣಮಿಸಿದ ಈ ಪರಂಪರೆಯ ನಿರಂತರತೆಯನ್ನು ಇಂದಿಗೂ ಚಲನ ಚಿತ್ರಗಳಲ್ಲಿ ಐಟಂ ಸಾಂಗುಗಳ ಮೂಲಕ ಸಾರಲಾಗುತ್ತಿದೆ. ಅಶ್ಲೀಲ ಸಾಹಿತ್ಯವಾಗಲೀ, ನಾಟಕಗಳಾಗಲೀ, ಚಲನಚಿತ್ರದ ಡೈಲಾಗುಗಳಾಗಲೀ, ಮಹಿಳೆಯರನ್ನು ಕುರಿತೇ ಆಗಿರುತ್ತದೆ. ಅಷ್ಟೇಕೆ ಸುಶಿಕ್ಷಿತ ಸಮುದಾಯದ ನಡುವೆಯೂ, ಕಛೇರಿಗಳಲ್ಲಿ, ಕಾಲೇಜಿನ ಕ್ಯಾಂಪಸ್ಸುಗಳಲ್ಲಿ ಮಹಿಳೆ ವಾಕ್-ಮನರಂಜನೆಯ ಸರಕಾಗಿಬಿಡುತ್ತಾಳೆ. ಈ ಎಲ್ಲ ಬದಲಾವಣೆಗಳೂ ಪಾಶ್ಚಿಮಾತ್ಯರಿಂದ ಆಮದು ಮಾಡಿಕೊಂಡದ್ದಲ್ಲ. ಸಾವಿರಾರು ವರ್ಷಗಳಿಂದ ನಡೆದು ಬಂದಿರುವ ಈ ಪರಂಪರೆ ಕ್ರಮಿಸಿದ ಹಾದಿಯನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಕಂಡುಬರುವ ಅಂಶವೆಂದರೆ, ಸಾಮಾಜಿಕ ಮತ್ತು ಆರ್ಥಿಕ ಸ್ಥಿತ್ಯಂತರಗಳಿಗನುಗುಣವಾಗಿ ಇದರ ಸ್ವರೂಪ ಬದಲಾಗಿರುವುದೇ ಹೊರತು ತಾತ್ವಿಕ ಮೂಲ ಬದಲಾಗಿಲ್ಲ. ರಾಜರ ಆಸ್ಥಾನಗಳಲ್ಲಿ ನಡೆಯುತ್ತಿದ್ದ ನೃತ್ಯ ಇಂದು ರೆಸಾರ್ಟ್‌ಗಳಲ್ಲಿ, ಕ್ಲಬ್‌ಗಳಲ್ಲಿ ನಡೆಯುತ್ತದೆ. ಮಹಿಳೆಯನ್ನು ವಿವಾಹ ಮಾರುಕಟ್ಟೆಯಲ್ಲಿನ ಸರಕಿನಂತೆ ನೋಡುವ ಸ್ವಯಂವರ ಪದ್ಧತಿ ರಾಮಾಯಣದ ಕಾಲದಲ್ಲಿದ್ದಂತೆ ಇಂದಿಗೂ ಜೀವಂತವಾಗಿದೆ. ಆಧುನಿಕತೆಯನ್ನು ಒಪ್ಪಿಕೊಂಡ ಧನಗಾಹಿ ಸಮಾಜದಲ್ಲಿ ಈ ವಿದ್ಯಮಾನಗಳು ಅತಿರೇಕವೆನಿಸುವುದೇ ಇಲ್ಲ. ಬಂಡವಾಳ ಹರಿದು ಬರುವ ಎಲ್ಲ ಪ್ರದೇಶಗಳಲ್ಲೂ ಈ ವಿಲಾಸಿ ಪರಂಪರೆ ಸಾಮಾನ್ಯವಾಗಿ ಸ್ವೀಕೃತ ಸಂಸ್ಕೃತಿಯಾಗಿಬಿಡುತ್ತದೆ.

ಈ ಹಿನ್ನೆಲೆಯಲ್ಲಿ ಪ್ರಸ್ತುತ ಪಬ್ ಸಂಸ್ಕೃತಿಯ ಸುತ್ತ ನಡೆಯುತ್ತಿರುವ ಚರ್ಚೆ ಒಂದು ರೀತಿಯಲ್ಲಿ ಪ್ರಧಾನ ವಿಷಯದಿಂದ ವಿಮುಖವಾಗುತ್ತಿದೆ. ಪಬ್ ಸಂಸ್ಕೃತಿ ನಮ್ಮದೇ ಅಥವಾ ಅನ್ಯರದೇ, ಹಿಂದೂ ಅಥವಾ ಪಾಶ್ಚಿಮಾತ್ಯವೇ, ಮಹಿಳಾ ವಿರೋಧಿಯೇ ಅಲ್ಲವೇ ಎಂಬ ವಾಗ್ವಾದಗಳಿಗಿಂತಲೂ, ಜಾಗತೀಕರಣ ಪ್ರಕ್ರಿಯೆಯನ್ನು ಹಲವಾರು ಕಾರಣಗಳಿಗಾಗಿ ಅವಿರೋಧವಾಗಿ ಒಪ್ಪಿಕೊಂಡ ಮೇಲ್ ಮಧ್ಯಮವರ್ಗಗಳ ಮತ್ತು ಧನಿಕ ವರ್ಗಗಳ ವಿಲಾಸೀ ಜೀವನದಲ್ಲಿ ಪಬ್ ಸಂಸ್ಕೃತಿ ಸಾಂಕೇತಿಕವಾಗಿಯಾದರೂ ಸಮ್ಮತಿ ಗಳಿಸಿರುವುದು ಇಲ್ಲಿ ಮುಖ್ಯವಾಗುತ್ತದೆ. ಬಂಡವಾಳಶಾಹಿ ರಾಷ್ಟ್ರಗಳಲ್ಲಿ ಪ್ರಚಲಿತವಾಗಿರುವ ಎಲ್ಲ ಸಾಂಸ್ಕೃತಿಕ ಅಂಶಗಳನ್ನೂ ಮೇಳೈಸಿಕೊಂಡು ಮುನ್ನುಗ್ಗುತ್ತಿರುವ ಭಾರತೀಯ ಸಮಾಜದಲ್ಲಿ ಪಬ್ ಸಂಸ್ಕೃತಿ, ತನ್ನ ದೇಸಿ ಪರಂಪರೆಯ ಪೊರೆಯನ್ನು ಕಳಚಿ ತನ್ನದೇ ಆದ ವಿಭಿನ್ನ ರೂಪ ಪಡೆದುಕೊಂಡಿದೆಯಷ್ಟೆ.

ನಿಯಂತ್ರಣ ಅಥವಾ ನಿರ್ಬಂಧ

ಪಬ್ ಸಂಸ್ಕೃತಿ ಹಿಂದೂ ವಿರೋಧಿ ಎಂಬ ನೆಪದಲ್ಲಿ ಮಂಗಳೂರಿನಲ್ಲಿ ನಡೆದ ಹಲ್ಲೆ ಮತ್ತು ಆಕ್ರಮಣ ಒಂದು ರೀತಿಯಲ್ಲಿ ಪುರುಷಪ್ರಧಾನ ವ್ಯವಸ್ಥೆಯ ಆಧಿಪತ್ಯವನ್ನು ಸಾಧಿಸುವುದೇ ಆಗಿದೆ. ಸಂಸ್ಕೃತಿಯ ರಕ್ಷಣೆಗೆ ಮಹಿಳೆಯರನ್ನೇ ಹೊಣೆಗಾರರನ್ನಾಗಿ ಮಾಡುವ ಪರಂಪರೆ ಹಿಂದೂ ಧರ್ಮಕ್ಕೆ ಮಾತ್ರ ಸೀಮಿತವಾಗಿಲ್ಲ. ಇಸ್ಲಾಂನ ಪ್ರತಿಪಾದಕರೂ ಇದೇ ರೀತಿಯ ನಿರ್ಬಂಧಗಳನ್ನು ವಿಧಿಸುತ್ತಿರುತ್ತಾರೆ. ವಸ್ತ್ರ ಸಂಹಿತೆ, ಅಶ್ಲೀಲತೆ, ಸಾಮಾಜಿಕ ಸಂಬಂಧಗಳು ಎಲ್ಲವೂ ಮಹಿಳಾ ಕೇಂದ್ರಿತವಾಗಿರುತ್ತವೆ. ಸೆಕ್ಯುಲರಿಸಂ ಮತ್ತು ಆಧುನಿಕತೆ ಸಂಸ್ಕೃತಿ ಮತ್ತು ನಾಗರಿಕತೆಗಳನ್ನು ನಾಶಮಾಡುತ್ತದೆ ಎಂಬ ವಾದವನ್ನು ಇಸ್ಲಾಂನ ವಿದ್ವಾಂಸರೂ ಮಂಡಿಸುತ್ತಾರೆ. ಎಲ್ಲ ಧರ್ಮಗಳಲ್ಲಿನ ಮೂಲಭೂತವಾದಿಗಳು ತಮ್ಮ ಸಂಸ್ಕೃತಿಯ ರಕ್ಷಣೆಗೆ ಮಹಿಳೆಯರನ್ನು ವಜ್ರಕವಚವೆಂದೇ ಭಾವಿಸುವುದನ್ನು ಕಾಣಬಹುದು. ಹಿಂದೂ ಧರ್ಮ ಪ್ರತಿಪಾದಕರು ಮಹಿಳೆಯರಿಗೆ ಅತಿಯಾದ ಗೌರವ(?) ನೀಡುವ ವಾದ ಮಂಡಿಸಿದರೆ, ಇಸ್ಲಾಂ ಧರ್ಮೀಯರು ಮಹಿಳೆಯರ ನೆರಳೇ ಸಂಸ್ಕೃತಿಯನ್ನು ನಾಶಗೊಳಿಸುತ್ತದೆ ಎಂಬು ವಾದಿಸುತ್ತಾರೆ.

ಆದರೆ ಎರಡೂ ಬಲಪಂಥೀಯ ಪ್ರತಿಪಾದಕರು ಆಧುನಿಕತೆಯನ್ನು ವ್ಯಾಖ್ಯಾನಿಸುವಾಗ ಬಂಡವಾಳಶಾಹಿ ವ್ಯವಸ್ಥೆಯ ವಿಲಾಸೀ ಭೋಗ ಜೀವನ ಶೈಲಿಯನ್ನು ವಿಶ್ಲೇಷಿಸುವುದಿಲ್ಲ. ಫ್ಯಾಷನ್ ಪೆರೇಡ್‌ಗಳು, ಡಿಸ್ಕೋ ಥೆಕ್‌ಗಳು, ಬಾರ್ ಮತ್ತು ರೆಸ್ಟೋರೆಂಟುಗಳು, ಧನಿಕರ ಲೈಂಗಿಕ ತೃಶೆ ತಣಿಸುವ ರೆಸಾರ್ಟುಗಳು ಇವೆಲ್ಲವೂ ಬಂಡವಾಳಶಾಹಿ ವ್ಯವಸ್ಥೆಯ ಅಂಶಿಕ ಭಾಗವಾಗಿದ್ದು, ಇವುಗಳ ವಿರುದ್ಧ ಮೂಲಭೂತವಾದಿಗಳ ಆಕ್ಷೇಪವಿರುವುದಿಲ್ಲ. ದುಬೈನಂತಹ ಇಸ್ಲಾಮಿಕ್ ರಾಷ್ಟ್ರಗಳಂತೆಯೇ ಮುಂಬೈ, ಮಂಗಳೂರಿನಲ್ಲೂ ಈ ವಿದ್ಯಮಾನ ಸರ್ವೇಸಾಮಾನ್ಯ.

ಮಹಿಳೆಯರು ಪಬ್‌ಗಳಲ್ಲಿ ಇರುವುದು ಹಿಂದೂ(?) ಸಂಸ್ಕೃತಿಗೆ ಅಪಚಾರ ಎಂದು ಹೇಳುವವರು ಸಿನಿಮಾಗಳಲ್ಲಿ ಐಟಂ ಸಾಂಗುಗಳಲ್ಲಿ ಕುಣಿಯುವ ನಾಯಕಿಯರು ಮಹಿಳೆಯ ರೂಪದಲ್ಲಿ ಕಾಣುವುದಿಲ್ಲವೇ? ಸಾಮಾಜಿಕ ಮತ್ತು ಆರ್ಥಿಕ ಸಂಕಷ್ಟಗಳಿಗೆ ಸಿಲುಕಿ ಇಂದಿಗೂ ಸಾವಿರಾರು ಸಂಖ್ಯೆಯಲ್ಲಿ ವೇಶ್ಯಾವಟಿಕೆಗೆ ಬಲಿಯಾಗುತ್ತಿರುವ ಮಹಿಳೆಯರು ಏಕೆ ಕಾಣುವುದಿಲ್ಲ? ಪುರುಷರ ಕಾಮತೃಷೆಗೆ ಬಲಿಯಾಗಿ ಅತ್ಯಾಚಾರಕ್ಕೊಳಗಾಗುವ ಹದಿಹರೆಯದ ಹುಡುಗಿಯರು ಏಕೆ ಗೋಚರಿಸುವುದಿಲ್ಲ? ವೈವಾಹಿಕ ಮಾರುಕಟ್ಟೆಯಲ್ಲಿ ಸೂಕ್ತ ಮೌಲ್ಯ ದೊರೆಯದೆ ಅಗ್ನಿಗೆ ಆಹುತಿಯಾಗುವ ವಧುಗಳೇಕೆ ಇವರ ಕಣ್ಣಿಗೆ ಬೀಳುವುದಿಲ್ಲ ? ಈ ವಿದ್ಯಮಾನಗಳೆಲ್ಲವೂ ಇವರ ಸಾಂಸ್ಕೃತಿಕ ಸಂಕಥನದಿಂದ ಹೊರಗುಳಿಯುವುದೇಕೆ ?

ಹಿಂದೂ ಮತ್ತು ಇಸ್ಲಾಂ ಮೂಲಭೂತವಾದಿಗಳಿಗೆ ಇಲ್ಲಿ ಸಂಸ್ಕೃತಿಯ ರಕ್ಷಣೆಗಿಂತಲೂ ಬಂಡವಾಳಶಾಹಿ ವ್ಯವಸ್ಥೆಯಲ್ಲೇ ಪುರುಷಪ್ರಧಾನ ವ್ಯವಸ್ಥೆಯ ರಕ್ಷಣೆ ಮಹತ್ವ ಗಳಿಸುತ್ತದೆ. ಯುವಜನತೆ ತಪ್ಪು ಹಾದಿ ಹಿಡಿಯುತ್ತಿದ್ದಾರೆ ಎಂಬ ಕೂಗಿನ ಹಿಂದೆ ಯುವಕರ ನೆರಳೇ ಕಾಣುವುದಿಲ್ಲ. ಗ್ರಾಮೀಣ ಸಮಾಜದಿಂದ ನಗರಕ್ಕೆ ಕಾಲಿರಿಸುವ ಅನೇಕಾನೇಕ ಹುಡುಗಿಯರನ್ನು ತಮ್ಮ ಹಾವಭಾವಗಳ ಮೂಲಕ, ಶ್ರೀಮಂತಿಕೆಯ ಮೂಲಕ ತಪ್ಪು ಹಾದಿಗೆಳೆಯುವುದು ಯುವಕರೇ ಅಲ್ಲವೇ? ಅವರನ್ನು ತಿದ್ದುವ ನಿಟ್ಟಿನಲ್ಲಿ ಯಾವ ಸಂಘಟನೆಗಳು ಮುಂದಾಗಿವೆ ? ಅಂತಹ ಪಡ್ಡೆ ಹುಡುಗರ ಪಡೆಯನ್ನೇ ಮಹಿಳೆಯರ ಮೇಲೆ ಆಕ್ರಮಣಕ್ಕೆ ಕಾಲಾಳುಗಳಾಗಿ ಪ್ರಯೋಗಿಸಲಾಗುತ್ತಿರುವುದು ಸರ್ವವೇದ್ಯವಲ್ಲವೇ ? ಪುರುಷ ಸಮಾಜದ ವಿಲಾಸೀ ಜೀವನದ ಅವಶ್ಯಕತೆಗಳಿಗೆ ಪೂರಕವಾಗಿ ಮಹಿಳೆಯರು ಮನರಂಜನಾ ಸಾಧನಗಳಾಗಿರಬೇಕೇ? ಇಲ್ಲಿ ಭಾಗವಹಿಸಿ, ಮತ್ತೊಂದೆಡೆ ದೂರವಿರಿ ಎಂದು ಮಹಿಳೆಯರಿಗೆ ಆಜ್ಞಾಪಿಸುವ ಅಧಿಕಾರ ಪುರುಷ ಸಮಾಜಕ್ಕೆ ಅಥವಾ ಮೂಲಭೂತವಾದಿಗಳಿಗೆ ಕೊಟ್ಟವರಾರು ?

ಪ್ರಜಾತಾಂತ್ರಿಕ ವ್ಯವಸ್ಥೆಗೆ ಸಮಾನತೆ ಮುಖ್ಯವಾದ ಅಡಿಗಲ್ಲು. ಲಿಂಗ ಸಮಾನತೆಯನ್ನು ಸಾಧಿಸಿದ ಎಲ್ಲ ರಾಷ್ಟ್ರಗಳೂ ಶೀಘ್ರ ಅಭಿವೃದ್ಧಿ ಹೊಂದಿರುವುದನ್ನು ಆಧುನಿಕ ಇತಿಹಾಸವೇ ನಿರೂಪಿಸಿದೆ. ಸಂಸ್ಕೃತಿಯನ್ನು ರಕ್ಷಿಸುವ ನೆಪದಲ್ಲಿ ಮಹಿಳಾ ಸಮುದಾಯವನ್ನು ಹತ್ತಿಕ್ಕುವ ತಂತ್ರ ಆಧುನಿಕ ಸಮಾಜದಲ್ಲಿ ಫಲಿಸುವುದಿಲ್ಲ. ಹಾಗಾಗಿಯೇ ಮೂಲಭೂತವಾದಿ ಸಂಘಟನೆಗಳು ಧರ್ಮದ ಮೊರೆ ಹೋಗುತ್ತವೆ. ಧರ್ಮ ಮತ್ತು ಸಂಸ್ಕೃತಿಯನ್ನು ತಳಕು ಹಾಕುವ ಮೂಲಕ, ಸಂಸ್ಕೃತಿ ಹಾಳಾಗುತ್ತಿದೆ ಎಂಬ ನೆಪಹೂಡಿ ಮಹಿಳೆಯರನ್ನು ನಿರ್ಬಂಧಕ್ಕೊಳಪಡಿಸಲು ಯತ್ನಿಸುತ್ತವೆ. ಮಂಗಳೂರಿನ ಪಬ್ ದಾಳಿ ಇದಕ್ಕೆ ನಿದರ್ಶನವಷ್ಟೆ.

ನಾ ದಿವಾಕರ